Udayavani: ಕಾಲೆಳೆಯುವಾಟ

ಕಾಲೆಳೆಯುವಾಟ!                        -ಎಸ್.ಜಿ.ಶಿವಶಂಕರ್


 ವಿಶ್ವ ಇಲ್ಲದ ಮೀಸೆಯನ್ನು ತಿರುವಿದ!

 ವಿಶಾಲೂ ಹಣೆ ಚಚ್ಚಿಕೊಂಡಳು!

 ವಿಶ್ವನ ಇಬ್ಬರು ಮಕ್ಕಳು ಪಿಂಕಿ ಮತ್ತು ಪಲ್ಲಿ ಕಕ್ಕಾಬಿಕ್ಕಿಯಾದರು!

 ಎರಡು ಸಾವಿರ ರೂಪಾಯಿ ಕಕ್ಕಿ ಎಲ್ಲ ಕಕ್ಕಾಬಿಕ್ಕಿಯಾಗುವಂತ, ಬೇಟೆಗಾರರು ಉಪಯೋಗಿಸುವಂತ ಬೂಟುಗಳನ್ನು ವಿಶ್ವ ಕೊಂಡು ತಂದಿದ್ದ!

 `ಇದು ಅತಿಯಾಯ್ತು, ಈ ಹಣಕ್ಕೆ ಒಂದು ರೇಷ್ಮೆ ಸೀರೆ ಬರ್ತಿತ್ತು!’ ವಿಶಾಲೂ ಉದ್ಗರಿಸಿದಳು!

 `ಒಂದು ಸ್ಟೋನ್ ವಾಷ್ ಜೀನ್ಸು, ನಾಲ್ಕು ಟೀ ಷರ್ಟು ಬರುತ್ತಿತ್ತು! ಅಪ್ಪ ಖರ್ಚು ಮಾಡಿದ ಹಣಕ್ಕೆ!’ ವಿಶ್ವನ ಮಗನ ಉದ್ಗಾರ!

 ‘ಒಂದು ಗ್ರಾಂಡ್ ಆಗಿರೋ ಡ್ರೆಸ್ ಮೆಟೀರಿಯಲ್ ಬರ್ತಿತ್ತು’ ಪಿಂಕಿ ಕೊರಗಿದಳು.

 `ಹೌದು ನೀವು ಹೇಳೋದೆಲ್ಲಾ ಬರ್ತಿತ್ತು! ಆದರೆ ಇಂತಾ ಷೂಸು ಬರ್ತಿದ್ದವಾ..?’ ರೇಗಿದ ವಿಶ್ವ, ಧೈರ್ಯ ಮಾಡಿ!

 `ಬರ್ತಿರಲಿಲ್ಲ ನಿಜ! ಆದರೆ ಇಂತಾ ದರಿದ್ರದ ಶೂಸು ನಿಮಗೆ ಯಾಕೆ ಬೇಕಿತ್ತು..?’

 `ಮತ್ತೆ ಫ್ಯಾಕ್ಟ್ರೀಲಿ ಕಾಲೆಳೆಯುತ್ತಾರಲ್ಲ...... ಆಗ ಬೀಳದೆ ಗಟ್ಟಿಯಾಗಿ ನೆಲದ ಮೇಲೆ ನಿಂತ್ಕೊಳ್ಳೋದಕ್ಕೆ ಇಂತಾ  ಬೂಟುಗಳು ಬೇಕೇಬೇಕು!’

 `ಏನು ಕಾಲೆಳೆಯೋದೆ..? ಏನು ಕಬಡ್ಡಿ ಆಡ್ತಾರಾ..?’ ವಿಶಾಲೂ ಅರ್ಥವಾಗದೆ ಕೇಳಿದಳು. 

 `ಹೌದು ಅದು ಕಬಡ್ಡೀನೆ! ಆದರೆ ಕಬಡ್ಡಿ ಕಬಡ್ಡಿ ಅಂತ ಹೇಳೋದಿಲ್ಲ ಅಷ್ಟೆ! ಸಡನ್ನಾಗಿ ಕಾಲೆಳೆದುಬಿಡ್ತಾರೆ’

 `ಹಾಗಿದ್ದರೆ ಕಾಲಿಗೆ ಎಣ್ಣೆ ಸವರಿಕೊಂಡು ಹೋಗಿ’

 `ಹುಷಾರಾಗಿ ಕಾಲು ನೋಡಿಕೊಂಡರಾಯಿತಪ್ಪಾ’

 ತರಹಾವರಿ ಸಲಹೆಗಳು ಬಂದಾಗ ವಿಶ್ವ ಎಲ್ಲರನ್ನೂ ಗದರಿಸಿದ.

 `ನಿಮಗೆ ಇವೆಲ್ಲಾ ಅರ್ಥವಾಗೋದಿಲ್ಲ. ಇಂತಾ ಷೂಸುಗಳ ಅವಶ್ಯಕತೆ ನನಗಿದೆ’

 `ಏನಪ್ಪಾ, ಬರ್ತಾಬರ್ತಾ ಹಿಟ್ಲರ್ ಆಗ್ತಿದ್ದೀರ’

 `ಹೌದು ಕೆಲವು ವಿಷಯಗಳಲ್ಲಿ ಹಾಗೇ ಇರಬೇಕಾಗುತ್ತೆ’

 ವಿಶ್ವನ ಈ ಬಿಗಿ ನಿಲುವಿಗೆ  ಗೊಣಗಾಟ ನಡೆದರೂ ಕೊನೆಗೆ ಬಾಯಿಗಳು ಮುಚ್ಚಿದವು. ಆದರೆ ಮನಸ್ಸುಗಳು ಮುಚ್ಚಲಿಲ್ಲ! ಎರಡು ಸಾವಿರದಷ್ಟು ಹಣಾನ ಕಾಲಿಗೆ ಹಾಕಿಕೊಳ್ಳುವ ಬೂಟುಗಳಿಗೆ ವಿಶ್ವ  ಸುರಿದನಲ್ಲ ಎಂಬುದೇ ಅವರೆಲ್ಲರ ಸಂಕಟ!

 ಮಾರನೆ ದಿನ ಫ್ಯಾಕ್ಟ್ರಿಯಲ್ಲಿ ವಿಶ್ವನ ಷೂಗಳು ಭಾರೀ ಸುದ್ದಿ ಮಾಡಿದುವು! ಆ ಷೂಗಳಿಗಳಿಂತಲೂ ವಿಶ್ವ ಕೊಡುತ್ತಿದ್ದ ಮುಚ್ಚುಮರೆಯಿಲ್ಲದ ವಿವರಣೆಯಿಂದಾಗಿ ಅವಕ್ಕೆ ಎಲ್ಲಿಲ್ಲದ ಮಹತ್ವ ಬಂದಿತ್ತು!

 ಡಿಪಾಟ್ರ್ಮೆಂಟ್ ಒಳಗೆ ಕಾಲಿಡುತ್ತಲೇ ವಿಶ್ವನಿಗೆ ಎದುರಾದವರು ಬಾಸು ಬಾಲ್ಡಿ ಬಿಶ್ವಾಸ್!  ವಿಶ್ವನಿಗೂ ಅವರ ಬಾಸಿಗೂ ಎಣ್ಣೆ ಸೀಗೇಕಾಯಿ ಸಂಬಂಧ!

 `ಏನಿದು..?’ ವಿಶ್ವನ ಕಾಲು ತೋರಿಸುತ್ತಾ ಬಿಶ್ವಾಸ್ ಕೇಳಿದರು. ಪ್ಯಣ್ಯಾತ್ಮ, ಹತ್ತು ವರ್ಷದಿಂದ ಕರ್ನಾಟಕದಲ್ಲಿದ್ದರೂ ಕನ್ನಡ ಕಲಿಯದೆ ಎಲ್ಲರನ್ನೂ ಹಿಂದಿಯಲ್ಲೇ ಮಾತಾಡಿಸುತ್ತಾ ಉಳಿದವರೂ ಹಿಂದಿ ಮಾತಾಡುವಂತೆ ಮಾಡಿದ್ದ-ಎಲ್ಲಾ ಕನ್ನಡೇತರರು ಮಾಡುವಂತೆ !

 `ಇದು ಷೂಸು, ಗೊತ್ತಾಗ್ತಿಲ್ಲವಾ ?’ ವಿಶ್ವ ವ್ಯಂಗ್ಯವಾಗಿ ನುಡಿದ. 

 `ಗೊತ್ತಾಗ್ತಿದೆ..ಇದೇನು ವಿಚಿತ್ರವಾಗಿದೆ...?’

 `ಇದಕ್ಕೆ ರೋಡ್ ಗ್ರಿಪ್ಪು ಜಾಸ್ತಿ!’ ವಿಶ್ವನ ಮಾತಿನಲ್ಲಿ ಕುಹಕತೆಯಿತ್ತು.

 `ರೋಡು ಗ್ರಿಪ್ಪೇ..? ಏನು ನೀನು ಕಾರಿನ ಸ್ಪೀಡಲ್ಲಿ ಓಡ್ತೀಯಾ..?’ ಬಿಶ್ವಾಸ್ ಅಣಕವಾಡಿದ.

 `ಇಲ್ಲ, ಇಲ್ಲಿ ಕಾಲೆಳೆಯೋರು ಜಾಸ್ತಿ ಅದಕ್ಕೇ ಇಂತಾ ಷೂಸ್ ಹಾಕ್ಕೊಳ್ಳೋದು ಅನಿವಾರ್ಯ! ಇದು ಕಾಲೆಳೆತರಹಿತ ಇದರ..ಬೆಲೆ ಎರಡು ಸಾವಿರ ರೂಪಾಯಿ’

 `ಇದು ಸ್ವಲ್ಪ ಅತೀನಪ್ಪಾ’ ಬಿಶ್ವಾಸ್ಗೆ ವಿಶ್ವ ತನ್ನನ್ನೇ ಕುರಿತು ಹೇಳಿದನೇನೋ ಎಂಬ ಅನುಮಾನ!

 `ನಾನು ಮಿತಿಯಲ್ಲೇ ಇರ್ತೀನಿ, ಆದ್ರೆ ಕಾಲೆಳೆಯೋರು ಅತಿಯಾಗಿ ಆಡ್ತಾರೆ’ ಖಾರವಾಗಿ ಹೇಳಿದ ವಿಶ್ವ, ಇನ್ನು ಮಾತು ಬೆಳಸದಿರಲೆಂಬ ಉದ್ದೇಶದಿಂದ. 

 ಮಧ್ಯಾನ್ಹದ ಲಂಚ್ ಸಮಯಕ್ಕೆ ಕಾರ್ಖಾನೆಯಲ್ಲಿ ವಿಶ್ವನ ಷೂಸುಗಳ ಸುದ್ದಿ ಅನೇಕ ಅನಿರೀಕ್ಷಿತ ತಿರುವುಗಳನ್ನು ಪಡೆದು ರೋಚಕ ವಿಷಯವಾಗಿ ಬೆಳೆದುಬಿಟ್ಟಿತ್ತು! ಇತ್ತೀಚೆಗೆ ವಿಶ್ವನ ಮೇಲೆ ಬಾಸುಗಳು ಮತ್ತು ಸಹೋದ್ಯೋಗಿಗಳ ಆಕ್ರಮಣ ಹೆಚ್ಚಾಗಿದೆ ಎಂಬ ಸುದ್ದಿಗೆ ಅತಿಯಾದ ಪ್ರಚಾರ ಸಿಕ್ಕಿಬಿಟ್ಟಿತ್ತು!  ಈ ಬೆಳವಣಿಗೆಯಿಂದ ವಿಶ್ವನ ಬಗೆಗೆ ಕಾರ್ಮಿಕರಲ್ಲಿ ವಿಶೇಷ ಅನುಕಂಪ ಹುಟ್ಟಿತ್ತು!

 ಯಾರುಯಾರೋ ಮಾಡಿದ ತಪ್ಪುಗಳಿಗೆ ವಿಶ್ವನನ್ನು ಕಾರಣ ಮಾಡುತ್ತಾರೆ..ಅವನ ತಲೆ ಮೇಲೆ ಗೂಬೆ ಕೂರಿಸುತ್ತಾರೆ!  ತಮ್ಮ ಹುಳುಕು ಮುಚ್ಚಿಕೊಳ್ಳಲು ವಿಶ್ವನ ಕಾರ್ಯಕ್ಷೇತ್ರದ ಕೊಳಕನ್ನು ತೋರಿಸುತ್ತಾರೆ! ಹುಳುಕಿಗಿಂತ ಕೊಳಕು ಬೇಗನೆ ಕಾಣಿಸುತ್ತದೆ! ಹೀಗೆ ಹತ್ತಾರು ಸುದ್ದಿಗಳು ಮತ್ತು ಕಾರಣಗಳು ಕೇವಲ ನಾಲ್ಕು ಗಂಟೆಗಳಲ್ಲಿ ಕಾರ್ಖಾನೆ ತುಂಬಾ  ಪಸರಿಸಿದ್ದವು!

 ನನ್ನ ಕಿವಿಗೂ ಈ ಸುದ್ದಿ ಬಿದ್ದಾಗ ಇನ್ನು ಸುಮ್ಮನಿರಬಾರದು ಎನ್ನಿಸಿತು. ಏಕೆಂದರೆ ವಿಶ್ವ ನನ್ನ ಚಡ್ಡಿ ಸ್ನೇಹಿತ! ನಾನು ಸುಮ್ಮನಿರಲು ಯತ್ನಿಸಿದರೂ ಉಳಿದವರು ಬಿಡಲಾರರು! ಇದನ್ನು ಮನಗಂಡು ವಿಶ್ವನನ್ನು ಹುಡುಕ ಹೊರಟೆ. ಊಟದ ಸಮಯವಾದುದರಿಂದ ಕ್ಯಾಂಟೀನಿನಲ್ಲಿ  ವಿಶ್ವ ಸಿಗುತ್ತಾನೆಂದು ಆ ಕಡೆಗೆ ಹೆಜ್ಜೆ ಹಾಕಿದೆ. 

 ಕ್ಯಾಂಟೀನಿನಲ್ಲಿ ವಿಶ್ವನ ತಲೆ ಹುಡುಕಿದೆ. ಆನತಿ ದೂರದಲ್ಲಿ ವಿಶ್ವ ಒಂಟಿ ಕೂತು ಆಹಾರ ಭಕ್ಷಣ ಕ್ರಿಯೆಯಲ್ಲಿ ತೊಡಗಿರುವುದು ಕಂಡಿತು. ಊಟದ ತಟ್ಟೆಯೊಂದಿಗೆ ವಿಶ್ವನ ಎದುರು ಹೋಗಿ ಕೂತೆ.

 ನನ್ನನ್ನು ಕಂಡರೂ ಪ್ರತಿಕ್ರಿಯೆ ತೋರಿಸಿದೆ ಮುಖ ಊದಿಸಿಕೊಂಡು ಕೂತಿದ್ದ ವಿಶ್ವ.

 `ಎಲ್ಲಿ ನಿನ್ನ ಕಾಲು ತೋರಿಸು’ ಅವನ ಷೂ ನೋಡುವ ದೃಷ್ಟಿಯಿಂದ ಕೇಳಿದೆ.

 `ಯಾಕೆ ಕಾಲಿಗೆ ನಮಸ್ಕಾರ ಮಾಡ್ತೀಯಾ..?’ ವಿಶ್ವ ಹಂಗಿಸಿದ.

 `ಕಾವಿ ಹಾಕ್ಕೊಂಡು ಮಠ ಸೇರ್ಕೊ..ಆಗ ಕಾಲಿಗೂ ನಮಸ್ಕಾರ ಮಾಡ್ತಿನಿ, ಕೈಗೂ ನಮಸ್ಕಾರ ಮಾಡ್ತೀನಿ. ಅದೇನೋ ವಿಚಿತ್ರವಾದ  ಷೂಸ್ ಹಾಕ್ಕೊಂಡು ಬಂದು ಇಡೀ ಫ್ಯಾಕ್ಟ್ರೀಲೇ ಸುದ್ದಿ ಮಾಡಿದ್ದೀಯಾ..? ಅದೆಂತಾ ಷೂಸು ನೋಡೋಣ ಅಂತ!’

 `ಹೌದು ಕಾಲೆಳೆಯುವ ನಿನ್ನಂತವರು ಜಾಸ್ತಿಯಾಗಿದ್ದಾರೆ! ಅದಕ್ಕೇ ಅತ್ಮ ರಕ್ಷಣೆಗೆ ಇಂತಾ ಷೂಸು ಧರಿಸೋದು ಅನಿವಾರ್ಯ!’ ಎಂದು ಟೇಬಲ್ ಕೆಳಗಿದ್ದ ತನ್ನ ಕಾಲನ್ನು ಈಚೆ ತೆಗೆದು ತೋರಿಸಿದ!

 `ಈ ಷೂಸ್ ಹಾಕಿಕೊಂಡರೆ ಕಾಲೆಳೆಯೋದು ಬಿಟ್ಟುಬಿಡ್ತಾರೆ ಅಂದ್ಕೊಂಡಿದ್ದೀಯಾ..? ಕೆಲಸ ಮಾಡುವಾಗ ತಮ್ಮ ತಪ್ಪನ್ನು ಮುಚ್ಚಿಕೊಳ್ಳೋಕೆ ಇನ್ನೊಬ್ಬರನ್ನು ಕಾಲೆಳೆಯೋದು ಈ ಕಾರ್ಖಾನೆಯಲ್ಲಿ ಮಾತ್ರ ಇದೆ ಅಂತ ತಿಳ್ಕೊಂಡಿದ್ದೀಯಾ..? ಇಡೀ ವಿಶ್ವದಲ್ಲಿ ಎಲ್ಲಿ ಒಬ್ಬರಿಗಿಂತ ಹೆಚ್ಚಿಗೆ ಜನ ಕೆಲಸ ಮಾಡ್ತಾರೋ.. ಒಂದು ಕೆಲಸಕ್ಕೆ ಒಬ್ಬರಿಗಿಂತ ಹೆಚ್ಚಿನ ಜನ ಹೊಣೆಗಾರರಾಗಿರ್ತಾರೋ ಅಲ್ಲೆಲ್ಲಾ ಇದು ತಪ್ಪಿದ್ದಲ್ಲ! ಇನ್ನು ನಿನ್ನದೇನು ವಿಶೇಷ ಅಂತ ಹೇಳ್ಕೋತಿದ್ದೀಯಾ..?’

 ವಿಶ್ವನ ಕಣ್ಣು ತೆರೆಸುವ ಪ್ರಯತ್ನ ಮಾಡಿದೆ.

  `ನಿನ್ನನ್ನ ಹಿತೈಷಿ ಅಂತ ತಿಳ್ಕೊಂಡಿದ್ದೀನಿ, ಜೊತೆಗೆ ಈಗ ಊಟ ಮಾಡ್ತಿದ್ದೇನೆ’

 ಅವನ ಕಣ್ಣುಗಳಲ್ಲಿದ್ದ ಅಪನಂಬಿಕೆ, ಮಾತಿನಲ್ಲಿದ್ದ ತೀಕ್ಷಣತೆ  ಪಕ್ಕದ ಮನೆಯವರ ನಾಯಿ ಸೀಜರ್‍ನ ನೆನಪಿಗೆ ತಂದಿತು. ಸೀಜರ್ ಕಳೆದ ಐದು ವರ್ಷಗಳಿಂದಲೂ ನನ್ನನ್ನು ಕಂಡರೆ ಕಳ್ಳನನ್ನು ನೋಡಿದಂತೆ ಬೊಗಳುತ್ತದೆ. ವಿಶ್ವನೂ ಅಷ್ಟೆ; ಬಾಲ್ಯದಿಂದಲೂ ನನ್ನನ್ನು ಕಂಡರೆ ಸೀಜರ್ ತರಾನೇ ಬೊಗಳೋದು, ಗುರುಗುಟ್ಟೋದು-ಎಲ್ಲಾ! ಪುಣ್ಯಕ್ಕೆ ಈವರೆಗೆ ಕಚ್ಚಿಲ್ಲ! ಕಚ್ಚಿದರೂ ಪರವಾಗಿಲ್ಲಾಂತ ಕಾಣುತ್ತೆ. ನಾಯಿ ಕಚ್ಚಿದರೆ ತಗೋಬೇಕಾದ ಹದಿನಾಲ್ಕು ಇಂಜೆಕ್ಷನ್ನಿನ ಅವಶ್ಯಕತೆಯಿಲ್ಲ. ಇಲ್ಲಾಂದ್ರೆ ಎಲ್ಲಾ ವಿವಾಹಿತರೂ ಆಗಾಗ್ಗೆ ಇಂಜೆಕ್ಷನ್ ತಗೊಳ್ಳೋದು ಅನಿವಾರ್ಯವಾಗಿಬಿಡುತ್ತಿತ್ತು! ಅದರಲ್ಲೂ ರಸಿಕ ಶಿಖಾಮಣಿಗಳು ಆಸ್ಪತ್ರೆಯ ಮುಂದೆ ಕ್ಯೂ ಹಚ್ಚಿಬಿಡ್ತಿದ್ದರೋ ಏನೋ..?!!

 ಪಕ್ಕದ ಮನೆ ನಾಯಿ ಸೀಜರ್ ಒಂದ್ಸಲ ಗುರುಗುಟ್ಟಿದ ಮೇಲೆ ನಾನು ಒಂದು ಹೆಜ್ಜೆಯನ್ನೂ ಮುಂದಿಡದೆ ಮನೆಯವರನ್ನು ಕರೀತೀನಿ. ಒಂದು ಹೆಜ್ಜೆ ಮುಂದಿಟ್ಟರೂ ಪರಿಣಾಮ ಹದಿನಾಲ್ಕು ಇಂಜೆಕ್ಷನ್ನು ಅನ್ನೋದು ನನಗೆ ಚೆನ್ನಾಗಿ ಗೊತ್ತು.

 ವಿಶ್ವ ಗುರುಗುಟ್ಟಿದ ನಂತರ ವಿಧಿಯಿಲ್ಲದೆ ಮೌನವಾಗಿ ಅತ್ತಿತ್ತ ನೋಡುತ್ತಾ ಊಟ ಮುಗಿಸಿದೆ. ಆನತಿ ದೂರದಲ್ಲಿ ವಿಶ್ವನ ಬಾಸೂ ಊಟ ಮಾಡುತ್ತಿದ್ದರು. ನನ್ನ ಕಡೆ ನೋಡಿ ಅದೇನೋ ಸನ್ನೆ ಮಾಡಿದರು. ಅದೇನೆಂದು ನನಗೆ ಅರ್ಥವಾಗಲಿಲ್ಲ. ತಾರಮ್ಮಯ್ಯ ಆಡಿಸಿ ಆಮೇಲೆ ಹೇಳಿ ಎಂದು ಸನ್ನೆ ಮಾಡಿದೆ. ಅವರು ಹೇಳಲು ಬಯಸುತ್ತಿರುವುದು ವಿಶ್ವನ ಬಗೆಗೇ ಎಂಬ ಅನುಮಾನ ಮೂಡಿತು. 

 ಕೈತೊಳೆದು ಕ್ಯಾಂಟೀನಿನಿಂದ ಈಚೆ ಬರುವಾಗ ವಿಶ್ವನನ್ನು ಕೇಳಿದೆ:

 ` ಈಗ ಮಾತಾಡಬಹುದೇನಯ್ಯಾ ಮಹಾನುಭಾವ..?’

 ನನ್ನನ್ನು ಒಂದು `ತರಾ’ ನೋಡಿ `ಹೂಂ’ ಎಂದ ವಿಶ್ವ.

 `ಎಲ್ರೂ ಕಾಲೆಳೀತಾರೆ, ಎಳೆದಾಗ ಬೀಳದೆ ಗಟ್ಟಿಯಾಗಿ ನಿಲ್ಲೋಕೆ ಈ ಷೂಸು ತಗೊಂಡಿದ್ದೀನಿ ಅಂತಾ ಫ್ಯಾಕ್ಟ್ರೀ ತುಂಬಾ ಹೇಳ್ಕೊಂಡು ಬರ್ತೀದ್ದೀಯ!’ ಅಕ್ಷೇಪಿಸಿದೆ.

 `ಅದ್ರಲ್ಲೇನು ತಪ್ಪು..? ಇರೋ ವಿಷಯ ಹೇಳಿದ್ದೀನಿ..’

 ಮುಖ ಊದಿಸಿಕೊಂಡೇ ಹೇಳಿದ. ನಾನು ಅವನನ್ನು ಖೆಡ್ಡಾಕ್ಕೆ ತಳ್ತಾ ಇದ್ದೀನಿ ಅನ್ನೋ ಹಾಗೆ ಎಚ್ಚರಿಕೆಯಿಂದ ಮಾತಾಡಿದ ವಿಶ್ವ.

 `ಅದೇ ತಪ್ಪು ವಿಶ್ವ. ಅಲ್ವೋ..ಕಾಲೆಳೀತಾರೆ ಅಂತಿದ್ದೀಯಲ್ಲಾ..? ಈವರೆಗೆ ಯಾರಾದರೂ ನಿನ್ನ ಕಾಲಿಗೆ ಕೈಹಾಕಿ, ಎಳೆದು ಬೀಳಿಸಿದ್ದಾರಾ..? ಅದು ಬರೀ ಮಾನಸಿಕ ಚಿತ್ರಣ ಕಣೋ! ಬರಿಯ ಕಲ್ಪನೆ!! ಅಂದ್ರೆ ನೀನು ಹೊಣೆಗಾರನಲ್ಲದಿರುವುದಕ್ಕೆ ನಿನ್ನನ್ನು ಹೊಣೆಗಾರನನ್ನಾಗಿ ಮಾಡಿ ತೋರಿಸೋದು! ಯಾರದೋ ತಪ್ಪಿಗೆ ನಿನ್ನನ್ನು ಬೈಯ್ಯಿಸೋದು! ಇಲ್ಲಾ ಇದ್ದಕ್ಕಿದ್ದ ಹಾಗೆ ಯಾವುದಾದರೂ ಇಕ್ಕಟ್ಟಿಗೆ ಸಿಕ್ಕಿಸಿಬಿಡೋದು_ಇವೇ ಅಲ್ಲವೇನೋ ನೀನು ಹೇಳ್ತಿರೋ ಕಾಲೆಳೆಯೋ ಕ್ರಿಯೆ..?’

 ಮಾತಾಡದೆ ವಿಶ್ವ ನನ್ನನ್ನು ದುರುದುರನೆ ನೋಡಿದ.

 `ಕಾಲೆಳೆಯೋದು ಮಾನಸಿಕ ಕ್ರಿಯೆ, ಆಂದ್ಮೇಲೆ ಕಾಲಿಗೆ ರೋಡ್‍ಗ್ರಿಪ್ ಷೂಸು ಹಾಕಿ ಏನೋ ಪ್ರಯೋಜನ..? ಬೇಕಾದರೆ ತಲೆಗೆ ಶೂಸ್ ಹಾಕಿಕೊಳ್ಳಬಹುದು’ ಎಂದು ಮೆಲ್ಲಗೆ ನಕ್ಕೆ!

 `ನಗ್ತಿದ್ದೀಯಾ..? ನಗು..ನನ್ಗೂ ಒಂದು ಕಾಲ ಬರುತ್ತೆ...ಆಗ ನೀನು ಅಳ್ತೀಯ ನಾನು ನಗ್ತೀನಿ..’

 ವಿಶ್ವ ಕಟುವಾಗಿ ನುಡಿದ. ನಾನು ಮಾತಿಗಾಗಿ ತಡಕಾಡುವಾಗ ಹಿಂದಿನಿಂದ ಯಾರೋ ಕರೆದಂತಾಯಿತು. ಹಿಂದೆ ತಿರುಗಿ ನೋಡಿದರೆ ವಿಶ್ವನ ಬಾಸು! ಮಾತಿಗೆ ಅನಿವಾರ್ಯ ಬ್ರೇಕು ಹಾಕಿದೆ.

 ಬಿಶ್ವಾಸ್ ನಮ್ಮ ಜೊತೆ ನಡೆದರು. ಹೆಡ್ಡಾಫೀಸಿನಿಂದ ಬಂದ ಸುತ್ತೋಲೆಯೊಂದರ ಬಗ್ಗೆ ಮಾತಾಡುತ್ತಾ, ಹೆಡ್ಡಾಫೀಸಿನವರ ಹೆಡ್ಡತನಕ್ಕೆ ವಾಚಾಮಗೋಚರವಾಗಿ ಬೈಯುತ್ತಿರುವಾಗಲೇ  ವಿಶ್ವನ ಡಿಪಾಟ್ರ್ಮೆಂಟು ಸಿಕ್ಕಿತು. 

 `ನಿಮ್ಮ ಹತ್ರ ಒಂದ್ವಿಷಯ ಮಾತಾಡ್ಬೇಕಿತ್ತು ಒಂದ್ನಿಮಿಷ ಚೇಂಬರಿಗೆ ಬರ್ತೀರಾ..?’ ಬಿಶ್ವಾಸ್ ಅಂಗಲಾಚಿದಂತೆ ತೋರಿತು. 

 `ಆಗಲಿ ಅದಕ್ಕೇನಂತೆ’ ಎಂದು ಅವರೊಡನೆ ನಡೆದೆ-ವಿಶ್ವನನ್ನು ಹಿಂದೆ ಬಿಟ್ಟು!

ವಿಶ್ವ ನನ್ನ ಭುಜ ಹಿಡಿದು ನಿಲ್ಲಿಸಿ ಹೇಳಿದ, `ಆ ಬಾಲ್ಡಿ ನನ್ನ ಬಗ್ಗೆ ಏನಾದ್ರೂ ಹೇಳಿದ್ರೆ ಇವತ್ತು ಅವನನ್ನು ಇಲ್ಲೇ ಮುಗಿಸಿಬಿಡ್ತೀನಿ’ ಎಂದು ಕಟಕಟ ಹಲ್ಲು ಕಡಿದ. ಪರಿಸ್ಥಿತಿ ವಿಪರೀತಕ್ಕೆ ಹೋಗುತ್ತಿರುವಂತೆ ಭಾಸವಾಯಿತು. ಉತ್ತರಿಸದೆ ಬಿಶ್ವಾಸ್ ಹಿಂದೆ ನಡೆದೆ.

`ನಿಮ್ಮ ಸ್ನೇಹಿತನಿಗೆ ಒಂದಿಷ್ಟು ಬುದ್ದಿ ಹೇಳ್ರೀ..’ ಒಂದು ಗ್ಲಾಸು ನೀರು ಗಟಗಟ ಕುಡಿದು ಹೇಳಿದರು ಬಿಶ್ವಾಸ್.

`ಯಾವ ವಿಷಯವಾಗಿ..?’ ಅನುಮಾನಿಸಿದೆ.

`ಅದೇರೀ..ಆ ದರಿದ್ರದ ಹಂಟರ್ ಷೂಸ್ ಹಾಕ್ಕೊಂಡು ಬಂದು ಎಲ್ಲಾ ನನ್ನ ಕಾಲೆಳೀತಾರೇಂತ ಫ್ಯಾಕ್ಟ್ರೀಲೆಲ್ಲಾ ಟಾಂಟಾಂ ಹೊಡ್ಕೊಂಡು ಎಲ್ಲರ ಸಿಂಪೆತಿ ಗಿಟ್ಟಿಸ್ತಾ ಇದ್ದಾರೆ! ಎಲ್ಲರಿಗೂ ನನ್ನ ಮೇಲೇ ಅನುಮಾನ..ಛೇ ಎಂತಾ ಪರಿಸ್ಥಿತಿ..! ನೋಡಿ ನಮ್ಮ ಜನಾನೂ ಇದನ್ನ ನಂಬ್ತಾರೆ..ಹೇಗಿದೆ..?’

`ಅವ್ನು ಯಾರ ಮಾತೂ ಕೇಳೊಲ್ಲ ಸಾರ್..ಹಟವಾದಿ..!’

`ಹಟವಾದೀನೋ..ಚಟವಾದೀನೋ..? ಅವ್ನು ನಿಮ್ಮ ಚೆಡ್ಡಿ ಸ್ನೇಹಿತ! ನಿಮ್ಮ ಮಾತನ್ನ ಕೇಳೇ ಕೇಳ್ತಾನೆ! ನನ್ನ ಮಾನ ಹೋಗ್ತಿದೇರಿ..ಸ್ವಲ್ಪ ಸಹಾಯ ಮಾಡೀಪ್ಪಾ..ಪ್ಲೀಸ್..ಆ ದರಿದ್ರದ ಷೂಸ್ ವಿಶ್ವ ಹಾಕ್ಕೊಂಡು ಬರಬಾರದು ಹಾಗೆ ಮಾಡೀಪ್ಪಾ..’ ಅವರ ಮಾತಿನಲ್ಲಿ ಬೇಡಿಕೆಯಿತ್ತು.

`ಆಗ್ಲಿ ಸಾರ್ ಟ್ರೈ ಮಾಡ್ತೀನಿ..’

`ಅಷ್ಟು ಮಾಡ್ರಿ, ನಿಮ್ಮುಪಕಾರ ನಾನು ಮರೆಯೊಲ್ಲ.. ಒಂದಿವ್ಸ ಕ್ಲಬ್ಬಿಗೆ ಹೋಗೋಣ ನನ್ನ ಅಕೌಂಟಲ್ಲಿ ಎರಡು ಪೆಗ್ಗು ಸ್ಕಾಚು..’ ಎಂದು ಕಣ್ಣು ಮಿಟುಕಿಸದರು. 

`ಜಿಪುಣರಲ್ಲಿ ಜಿಪುಣ’ ಎಂದು ಫೇಮಸ್ಸು ವಿಶ್ವನ ಬಾಸು. ಇಂತಾ ಮನುಷ್ಯ ಕ್ಲಬ್ಬಲ್ಲಿ ಗುಂಡು ಹಾಕಿಸ್ತೀನಿ ಅನ್ನಬೇಕಾದರೆ ಅವನು ಎಂತ ಮಾನಸಿಕ ಒತ್ತಡದಲ್ಲಿದ್ದಾನೆ ಎಂದು ಊಹಿಸಬಹುದಿತ್ತು!

ಆಚೆ ಠಳಾಯಿಸುತ್ತಿದ್ದವನು ವಿಶ್ವ ನನ್ನ ಕಂಡೊಡನೆ ಹತ್ತಿರ ಬಂದು ಕೇಳಿದ `ಏನಂದಾ ಆ ಬಾಸು..ಎಲೆ ಕೋಸು? ನನ್ನ ಬಗ್ಗೆ ಏನಾದ್ರೂ ಹೇಳಿದ್ನಾ..?’

‘ಇಲ್ಲಯ್ಯಾ..ಬೇರೇನೋ ವಿಷಯ..’ ಎಂದು ಜಾರಿಕೊಂಡೆ.

ಡಿಪಾರ್ಟುಮೆಂಟು ತಲುಪುತ್ತಲೇ ಅಚ್ಚರಿಯ ಸುದ್ದಿ ಕಾದಿತ್ತು. ಆಫೀಸಿನಲ್ಲಿ ನನಗೊಂದು ಫೆÇೀನು ಬಂದಿತ್ತೆಂದೂ ಅರ್ಜೆಂಟು ವಿಷಯ ಎಂದು ಫೆÇೀನು ನಂಬರು ಕೊಟ್ಟರು. ಅಶ್ಚರ್ಯ! ಅದು ವಿಶ್ವನ ಮನೆಯ ಫೆÇೀನಾಗಿತ್ತು! ಎಲಾ ಅಂತದ್ದೇನು ಅರ್ಜೆಂಟೂ..ಅದೂ ವಿಶ್ವ ಫ್ಯಾಕ್ಟರಿ ಒಳಗೆ ಇರುವಾಗಲೇ ಎಂದು ಅಚ್ಚರಿಯಿಂದ ಫೆÇೀನಾಯಿಸಿದೆ. 

ವಿಶ್ವನ ಮಗಳು ಪಿಂಕಿ ಲೈನಿನಲ್ಲಿ ಬಂದಳು.

`ಏನು ಪಿಂಕಿ ? ಅರ್ಜೆಂಟು ವಿಷಯವಂತೆ...?’

`ಅದೇ ಅಂಕಲ್, ಅಪ್ಪನ ವಿಷಯ! ಹೊಸದೊಂದು ರಾದ್ಧಾಂತ..! ಅರ್ಜೆಂಟು ಬನ್ನಿ ಸಂಜೆ ಅಪ್ಪ ಕ್ಲಬ್ಬಿಗೆ ಹೋಗಿ ವಾಪಸ್ಸು ಬರುವುದರೊಳಗೆ ಮನೆಗೆ ಬರ್ಬೇಕು..’

`ಸರಿ, ಅದೇನು ರಾದ್ಧಾಂತ..?’ 

`ಅಯ್ಯೋ..ಅದು ಫೆÇೀನಲ್ಲಿ ಹೇಳೋಕಾಗೊಲ್ಲ..’

`ಆಯ್ತಮ್ಮ ಬರ್ತೀನಿ’ಎಂದು ಪೆÇೀನಿಟ್ಟೆ.

ಂ  ಂ  ಂ  ಂ  ಂ  ಂ  ಂ

ಸಂಜೆ ವಿಶ್ವನ ಮನೇಲಿ ಹೈಕಮ್ಯಾಂಡು ಮೀಟಿಂಗು ಸೇರಿತ್ತು. ಅಂದರೆ ವಿಶ್ವನ ಸಂಸಾರದ ಸದಸ್ಯರ ಮೀಟಿಂಗು-ವಿಶ್ವನನ್ನು ಹೊರತುಪಡಿಸಿ! ವಿಶ್ವನ ಮಡದಿ ವಿಶಾಲೂ, ಮಗ ಪವನ, ಮಗಳು ಪಿಂಕಿ ಮತ್ತು ನಾನೊಬ್ಬ ಅಹ್ವಾನಿತ ಸದಸ್ಯ.

`ಮೊದಲು ವಿಷಯ ಏನೂ ಅನ್ನೋದನ್ನ ತಿಳಿಸಿ ಆಮೇಲೆ ಅದರ ಬಗ್ಗೆ ಚರ್ಚೆ..’  ಮೊದಲು ಮಾತಾಡಿದವನು ನಾನೇ.

ಪವನ ಹೋಗಿ ಯಾವುದೋ ವಸ್ತು ತಂದು ನನ್ನ ಮುಂದೆ ದೊಪ್ಪನೆ ಹಾಕಿದ; ವಿಶ್ವ ಬೆಳಿಗ್ಗೆ ಫ್ಯಾಕ್ಟರಿಗೆ ಹಾಕಿಕೊಂಡು ಬಂದ ಷೂಸುಗಳು!! 

`ಎಲಾ ಇದು ವಿಶ್ವನ ಹೊಸಾ ಷೂಸು..! ಇದರಿಂದಾನೇ ಫಾಕ್ಟರಿ ತುಂಬಾ ವಿಶ್ವನ ಸುದ್ದಿ..!’

`ಈ ದರಿದ್ರ ಷೂಗಳಿಂದ ನಮ್ಮ ಮಾನ ಹೋಗ್ತಾ ಇದೆ! ನಾಲ್ಕು ಜನರೆದುರು ತಲೆ ಎತ್ತಿ ಓಡಾಡೋಕಾಗೊಲ್ಲ!’ ವಿಶ್ವನ ಮಡದಿ ವಿಶಾಲೂ ಕಣ್ಣಲ್ಲಿ ತುಂಬಿ ಹರಿವ ಜೋಗದ ಜಲಪಾತ ಕಂಡಿತು. `ಈ ದರಿದ್ರ ಷೂಸ್‍ಗೆ ಎರಡು ಸಾವಿರ ಸುರಿದು ಬಂದಿದ್ದಾರೆ! ಒಂದು ರೇಷ್ಮೆ ಸೀರೆ ಬರ್ತಿತ್ತು! ಇಲ್ಲಾಂದ್ರೆ ಪಿಂಕಿಗೆ ಒಂದು ಗ್ರಾಂಡ್ ಡ್ರೆಸ್ಸಾದ್ರೂ ಬರ್ತಿತ್ತು! ಏನೂ ಇಲ್ಲಾಂದ್ರೆ ಪವನನಿಗೆ ಒಂದು ಜೀನ್ಸಾದ್ರೂ ಬರ್ತಿತ್ತು..! ಇವತ್ತು ಬೆಳಿಗ್ಗೆ ಅವರು ಇದನ್ನ ಹಾಕ್ಕೊಂಡು ಹೋಗ್ತಾ ಇದ್ರೆ ಥೇಟ್ ಕಾಡುಗಳ್ಳ ವೀರಪ್ಪನ್ ತರಾ ಕಾಣ್ತಿದ್ದರು. ಪಕ್ಕದ ಮನೆಯವರು ಆಗ್ಲೇ ಕೇಳಿದ್ರು..ಏನಾಗಿದೆ  ನಿಮ್ಮವರಿಗೆ ಅಂತಾ! ಇದನ್ನೆಲ್ಲಾ ನಾವು ಸಹಿಸಿಕೊಂಡಿರೋಕಾಗುತ್ತಾ..? ಇದಕ್ಕೇನಾದ್ರೂ ಒಂದು ಗತಿ ಕಾಣಿಸಬೇಕು..ಅವರನ್ನ ಕೇಳಿದ್ರೆ ಫ್ಯಾಕ್ಟ್ರೀಲಿ ಎಲ್ಲಾ ಕಾಲೆಳೀತಾರೆ ಅದಕ್ಕೆ ಈ ಷೂಸ್ ಹಾಕ್ಕೊಳ್ಳಲೇಬೇಕು ಅಂತಾರೆ!’

`ಅಂಕಲ್ ನನ್ನ ಫ್ರೆಂಡ್ಸ್ ಇನ್ನೂ ನೋಡಿಲ್ಲ. ನೋಡಿದ್ರೆ ದಂತಚೋರ ವೀರಪ್ಪನ್ ಮಗಳು ಅಂತಾ ಖಂಡಿತಾ ಅಡ್ಕೋತಾರೆ..ಪ್ಲೀಸ್ ಅಂಕಲ್ ಏನಾದ್ರೂ ಮಾಡಿ..’ ಪಿಂಕಿ ಗೋಗರೆದಳು.

`ಆ ಷೂಸ್ ನೋಡಿದ್ರೆ..ಕನಿಷ್ಠ ಹತ್ತು ವರ್ಷವಾದರೂ ಸವೆಯೋದಿಲ್ಲ ಅನ್ಸುತ್ತೆ...! ಅಲ್ಲೀವರೆಗೆ ನಮ್ಮ ಜೀವನ..?’ ಜೋಗದ ಸಿರಿ ವಿಶಾಲೂ ಕಣ್ಣಲ್ಲಿ ಮುಂದುವರಿದಿತ್ತು!

ಸಮಸ್ಯೆ ವಿಚಿತ್ರವಾಗಿತ್ತು! ಇದಕ್ಕೆ ಏನು ಪರಿಹಾರ..? ವಿಶ್ವನ ಸ್ನೇಹವೂ ಉಳೀಬೇಕು..ಅವನ ಸಂಸಾರಕ್ಕೆ ಈ ಷೂಸುಗಳಿಂದ ಆಗಬಹುದಾದ ಅವಮಾನ ಮತ್ತು ಕೀಳರಿಮೆಗಳಿಂದ ಮುಕ್ತಿ ಸಿಗಬೇಕು! ಒಂದೈದು ನಿಮಿಷ ಗಾಢ ಮೌನ ಆವರಿಸಿತು. ಎಲ್ಲರೂ ಯೋಚಿಸುತ್ತಿದ್ದರು! 

ಇಷ್ಟರಲ್ಲಿ ವಿಶ್ವನ ನಾಯಿ ಜಿಮ್ಮಿ ಬಾಲ ಅಲ್ಲಾಡಿಸುತ್ತಾ ಬಂದು ವಿಶ್ವನ ಷೂಸನ್ನು ಮೂಸಿತು. ಪವನ ಗದರಿದ. ಜಿಮ್ಮಿ‘ಹೋಗಲಿ ಪಾಪ’ ಎನ್ನುವಂತೆ ಹಿಂದೆ ಸರಿಯಿತು. 

ಜಿಮ್ಮಿಯ ವರ್ತನೆ ನೋಡುತ್ತಲೇ ನನಗೆ ನೀರಿನ ತೊಟ್ಟಿಯಲ್ಲಿ ಮಲಗಿದ್ದ ಅರ್ಕಿಮಿಡೀಸ್‍ಗೆ ಆದ ಅನುಭವ! ರೋಮಾಂಚನ..!! ಮೈ ನಡುಗಿತು! ವಿಶ್ವನ ಷೂಸ್ ಸಮಸ್ಯೆಗೆ ಜಿಮ್ಮಿ ಪರಿಹಾರ ಸೂಚಿಸಿತ್ತು! ಗಹಗಹಿಸಿ ವಿಜಯದ ನಗೆ ನಕ್ಕೆ!

`ಈಗ ಚೆನ್ನಾಗಿದ್ರಲ್ಲ ಅಂಕಲ್’ ಪಿಂಕಿ ಗಾಬರಿಗೊಂಡಳು.

`ಷೂ ಸಮಸ್ಯೆಗೆ ಪರಿಹಾರ ಸಿಕ್ಕಿತು!’ ಎಂದೆ.

`ಏನು..?’

`ಜಿಮ್ಮಿ !! ಜಿಮ್ಮೀನೇ ಈ ಸಮಸ್ಯೆಗೆ ಉತ್ತರ!  ಪವನ್, ಇವತ್ತು ರಾತ್ರಿ ವಿಶ್ವ ಮಲಗಿದ ಮೇಲೆ..ಈ ಷೂಗಳನ್ನ ಜಿಮ್ಮಿ ಮುಂದೆ ಹಾಕಿ ಏನೂ ಅಗಿಲ್ಲದಂತೆ ಮಲಗಿಬಿಡು’

ನಾನು ಹೇಳಿದ ಉಪಾಯಕ್ಕೆ ಸರ್ವಾನುಮತ ಸಿಕ್ಕಿತು. ಏನೋ ನೆನಪಾಗಿ ಸಮಯ ನೋಡಿಕೊಂಡೆ. ವಿಶ್ವ ಕ್ಲಬ್ಬಿನಿಂದ ಬರುವ ಸಮಯ!  ಸಿಕ್ಕಿಕೊಂಡರೆ ಎಡವಟ್ಟಾಗುತ್ತೆಂದು ಬೇಗನೆ ಜಾಗ ಖಾಲಿ ಮಾಡಿದೆ!

ಬೆಳಿಗ್ಗೆ ಫ್ಯಾಕ್ಟರಿಯಲ್ಲಿ ವಿಶ್ವ ಸಿಕ್ಕಾಗ ಅವನ ಕಾಲಲ್ಲಿ ಹಂಟರ್ ಷೂಗಳು ಇರಲಿಲ್ಲ; ಕಂಪೆನಿ ಕೊಟ್ಟ ಮಾಮೂಲಿ ಷೂಗಳು ಇದ್ದವು.

`ಏನಾಯ್ತೋ ನಿನ್ನ ಕಾಲೆಳೆಯುವಿಕೆ ರಹಿತ ಶೂಸಿಗೆ..?’ ಅಮಾಯಕನಂತೆ ಕೇಳಿದೆ!

`ಆ ದರಿದ್ರ ನಾಯಿ..’ ಎಂದು ಹಲ್ಲು ಕಡಿದ.

`ಜಿಮ್ಮೀನಾ? ಏನಾಯ್ತು ಜಿಮ್ಮಿಗೆ..?’

`ಅದಕ್ಕೆ ಏನೂ ಅಗಿಲ್ಲ! ಆಗಿದ್ದು ನನ್ನ ಷೂಸುಗಳಿಗೆ. ಇಡೀ ರಾತ್ರಿ ಎರಡು ಷೂಗಳನ್ನೂ ಅಗಿದು ಹಾಕಿಬಿಟ್ಟಿದೆ! ಎರಡು ಸಾವಿರ ನೀರಿನಲ್ಲಿ ಹೋಮ!’

`ಅಯ್ಯಯ್ಯೋ ಷೂ ಹಾಳಾಯಿತೇನೋ..?’ಎಲ್ಲಾ ಗೊತ್ತಿದ್ದರೂ ಅಮಾಯಕನಂತೆ ನಟಿಸಿದೆ. 

`ಈ ಫ್ಯಾಕ್ಟ್ರಿಯ ಕಾಲೆಳೆಯೋ ಜನರ ಬುದ್ಢೀನೇ ಆ ನಾಯಿಗೂ!’ ವಿಶ್ವ ಕೋಪದಿಂದ ಉರಿಯುತ್ತಿದ್ದ. ಆ ಉರಿ ಆರಿಸಲು ಫೈರು ಬ್ರಿಗೇಡಿಗೆ ಫೆÇೀನು ಮಾಡಲೆ ಎಂದು ಚಿಂತಿಸುತ್ತಾ ನನ್ನ ಡಿಪಾಟ್ರ್ಮೆಂಟ್ ಕಡೆಗೆ ನಡೆದೆ ! 




Comments

Popular posts from this blog